KN/Prabhupada 0124 - ಆಧ್ಯಾತ್ಮಿಕ ಗುರುವಿನ ಮಾತುಗಳನ್ನು ನಾವು ನಮ್ಮ ಜೀವ ಮತ್ತು ಆತ್ಮವಾಗಿ ಪರಿಗಣಿಸಬೇಕು



His Divine Grace Srila Bhaktisiddhanta Sarasvati Gosvami Prabhupada's Disappearance Day, Lecture -- Los Angeles, December 9, 1968

ಆದ್ದರಿಂದ ಅವರು ತಮ್ಮ ಇಡಿ ಜೀವನ ಅಖಂಡ ಬ್ರಹ್ಮಚಾರಿಯಾಗಿ ಬಾಳಿದರು. ಭಕ್ತಿವಿನೋದ ಠಾಕುರ ಅವರಿಗೆ ಇನ್ನೂ ಅನೇಕ ಗಂಡು ಮಕ್ಕಳಿದ್ದರು, ಇವರು ಐದನೇ ಮಗ. ಅವರ ಕೆಲವು ಸಹೋದರರೂ ಸಹ ಮದುವೆಯಾಗಲಿಲ್ಲ. ಮತ್ತು ನನ್ನ ಗುರು ಮಹಾರಾಜರು, ಅವರೂ ಕೂಡ ಮದುವೆಯಾಗಲಿಲ್ಲ. ಬಾಲ್ಯದಿಂದಲೂ ಅವರು ಕಟ್ಟುನಿಟ್ಟಾದ ಬ್ರಹ್ಮಚಾರಿ, ಭಕ್ತಿಸಿದ್ಧಾಂತ ಸರಸ್ವತೀ ಗೋಸ್ವಾಮಿ ಮಹಾರಾಜ. ಮತ್ತು ಈ ಚಳುವಳಿಯನ್ನು, ವಿಶ್ವಾದ್ಯಂತ ಚಳುವಳಿಯನ್ನು, ಪ್ರಾರಂಭಿಸಲು ಅವರು ತೀವ್ರವಾದ ತಪಸ್ಸಲ್ಲಿ ತೊಡಗಿದ್ದರು. ಅದೇ ಅವರ ಧ್ಯೇಯವಾಗಿತ್ತು. ಭಕ್ತಿವಿನೋದ ಠಾಕುರ ಇದನ್ನು ಮಾಡಲು ಬಯಸಿದ್ದರು. ಅವರು, 1896ರಲ್ಲಿ, ಭಕ್ತಿವಿನೋದ ಠಾಕುರ, ಈ ಕೃಷ್ಣ ಪ್ರಜ್ಞೆ ಆಂದೋಲನವನ್ನು ಪರಿಚಯಿಸಲು ಬಯಸಿದ್ದರು, ‘ಶ್ರೀ ಚೈತನ್ಯ ಮಹಾಪ್ರಭು, ಅವರ ಜೀವನ ಮತ್ತು ಆಚಾರ ವಿಧಿಗಳು’, ಈ ಪುಸ್ತಕವನ್ನು ಕಳುಹಿಸುವ ಮೂಲಕ. ಅದೃಷ್ಟವಶಾತ್, ಆ ವರ್ಷ ನನ್ನ ಜನ್ಮ ವರ್ಷ, ಮತ್ತು ಕೃಷ್ಣನ ವ್ಯವಸ್ಥೆಯಿಂದ, ನಾವು ಸಂಪರ್ಕಕ್ಕೆ ಬಂದೆವು. ನಾನು ಬೇರೆ ಕುಟುಂಬದಲ್ಲಿ ಜನಿಸಿದೆ, ನನ್ನ ಗುರು ಮಹಾರಾಜರು ಬೇರೆ ಕುಟುಂಬದಲ್ಲಿ ಜನಿಸಿದರು. ನಾನು ಅವರ ರಕ್ಷಣೆಗೆ ಪಾತ್ರನಾಗುತ್ತೇನೆ ಎಂದು ಯಾರು ತಿಳಿದಿದ್ದರು? ನಾನು ಅಮೇರಿಕ ಬರುತ್ತೇನೆ ಎಂದು ಯಾರಿಗೆ ಗೊತ್ತಿತು? ನೀವು ಅಮೇರಿಕನ್ ಹುಡುಗರು ನನ್ನ ಬಳಿಗೆ ಬರುವಿರಿ ಎಂದು ಯಾರು ತಿಳಿದಿದ್ದರು? ಇವೆಲ್ಲವೂ ಕೃಷ್ಣನ ವ್ಯವಸ್ಥೆ. ವಿಷಯಗಳು ಹೇಗೆ ನಡೆಯುತ್ತಿದೆ ಎಂದು ನಮಗೆ ಅರ್ಥವಾಗುವುದಿಲ್ಲ.

1936ರಲ್ಲಿ... ಇಂದು ಡಿಸೆಂಬರ್ 9, 1938 (68). ಅಂದರೆ 32 ವರ್ಷಗಳ ಹಿಂದೆ. ಬಾಂಬೆಯಲ್ಲಿ, ನಾನು ಆಗ ವ್ಯಾಪಾರ ಮಾಡುತ್ತಿದ್ದೆ. ಇದ್ದಕ್ಕಿದ್ದಂತೆ, ಬಹುಶಃ ಈ ದಿನಾಂಕದಂದು, ಅಂದರೆ ಡಿಸೆಂಬರ್ 9 ಅಥವಾ 10ರ ನಡುವೆ. ಆ ಸಮಯದಲ್ಲಿ, ಗುರು ಮಹಾರಾಜರು ಸ್ವಲ್ಪಮಟ್ಟಿಗೆ ಅಸ್ವಸ್ಥರಾಗಿದ್ದರು, ಮತ್ತು ಅವರು ಸಮುದ್ರ ತೀರದ ಜಗನ್ನಾಥ ಪುರೀಯಲ್ಲಿ ತಂಗಿದ್ದರು. ಹಾಗಾಗಿ ನಾನು ಅವರಿಗೆ ಪತ್ರ ಬರೆದೆ, "ನನ್ನ ಪ್ರೀತಿಯ ಗುರುವೇ, ನಿಮ್ಮ ಇತರ ಶಿಷ್ಯರು, ಬ್ರಹ್ಮಚಾರಿ, ಸನ್ಯಾಸಿ, ಅವರು ನಿಮಗೆ ನೇರ ಸೇವೆಯನ್ನು ನೀಡುತ್ತಿದ್ದಾರೆ. ಆದರೆ ನಾನು ಗೃಹಸ್ಥ. ನಾನು ನಿಮ್ಮ ಜೊತೆ ಬಾಳಲು ಸಾಧ್ಯವಿಲ್ಲ, ನಾನು ನಿಮಗೆ ಉತ್ತಮವಾಗಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ. ನನಗೆ ಗೊತ್ತಾಗುತ್ತಿಲ್ಲ. ನಾನು ನಿಮಗೆ ಹೇಗೆ ಸೇವೆ ಸಲ್ಲಿಸುವುದು?” ಸುಮ್ಮನೆ ಒಂದು ಆಲೋಚನೆ, ನಾನು ಅವರಿಗೆ ಸೇವೆ ಮಾಡುವ ಬಗ್ಗೆ ಯೋಚಿಸುತ್ತಿದ್ದೆ, "ನಾನು ಅವರಿಗೆ ಹೇಗೆ ಶ್ರದ್ಧೆಯಿಂದ ಸೇವೆ ಸಲ್ಲಿಸುವುದು?" ಇದಕ್ಕೆ ಉತ್ತರವನ್ನು ಡಿಸೆಂಬರ್ 13, 1936ರಂದು ನೀಡಿದರು. ಆ ಪತ್ರದಲ್ಲಿ ಅವರು ಬರೆದಿದ್ದರು, "ನನ್ನ ಪ್ರಿಯ…, ನಿನ್ನ ಪತ್ರವನ್ನು ಪಡೆದು ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಆಂದೋಲನವನ್ನು ಇಂಗ್ಲಿಷ್ನಲ್ಲಿ ಮುನ್ನಡೆಸಲು ನೀನು ಪ್ರಯತ್ನಿಸಬೇಕು ಎಂದು ನಾನು ಭಾವಿಸುತ್ತೇನೆ.” ಅದೇ ಅವರು ಬರೆದದ್ದು. "ಅದು ನಿನಗೆ ಮತ್ತು ನಿನಗೆ ಸಹಾಯ ಮಾಡುವ ಜನರಿಗೆ ಒಳ್ಳೆಯದನ್ನು ಮಾಡುತ್ತದೆ.” “ನನ್ನ ಬಯಕೆ…” ಅದೇ ಅವರ ಆದೇಶವಾಗಿತ್ತು.

ತದನಂತರ 1936ರಲ್ಲಿ, ಡಿಸೆಂಬರ್ 31 ರಂದು - ಅಂದರೆ ಅವರು ದೈವಾಧೀನರಾಗುವ ಹದಿನೈದು ದಿನಗಳ ಮೊದಲು, ಈ ಪತ್ರವನ್ನು ಬರೆದ ನಂತರ -ಅವರು ನಿಧನರಾದರು. ನನ್ನ ಆಧ್ಯಾತ್ಮಿಕ ಗುರುವಿನ ಆ ಆದೇಶವನ್ನು ನಾನು ತುಂಬಾ ಗಂಭೀರವಾಗಿ ತೆಗೆದುಕೊಂಡೆ, ಆದರೆ ನಾನು ಅಂತಹ ಕೆಲಸವನ್ನು ಮಾಡಬೇಕೆಂದು ನಾನು ಭಾವಿಸಲಿಲ್ಲ. ನಾನು ಆ ಸಮಯದಲ್ಲಿ ಗೃಹಸ್ತನಾಗಿದ್ದೆ. ಆದರೆ ಇದು ಕೃಷ್ಣನ ವ್ಯವಸ್ಥೆ. ಆಧ್ಯಾತ್ಮಿಕ ಗುರುವನ್ನು, ಅವರ ಆದೇಶವನ್ನು, ಪೂರೈಸಲು ನಾವು ಕಟ್ಟುನಿಟ್ಟಾಗಿ ಪ್ರಯತ್ನಿಸಿದರೆ, ಕೃಷ್ಣ ನಮಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಾನೆ. ಅದುವೇ ರಹಸ್ಯ. ಯಾವುದೇ ಸಾಧ್ಯತೆಯಿಲ್ಲದಿದ್ದರೂ, ನಾನು ಎಂದಿಗೂ ಯೋಚಿಸಲಿಲ್ಲ, ಆದರೆ ಭಗವದ್ಗೀತೆಯ ಕುರಿತು ವಿಶ್ವನಾಥ ಚಕ್ರವರ್ತಿ ಠಾಕುರರವರ ವ್ಯಾಖ್ಯಾನವನ್ನು ಅಧ್ಯಯನ ಮಾಡುವ ಮೂಲಕ ನಾನು ಅದನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಿದೆ. ಭಗವದ್ಗೀತೆಯ ವ್ಯವಸಾಯಾತ್ಮಿಕಾ-ಬುದ್ಧಿರ್ ಏಕೇಹ ಕುರು-ನಂದನ (ಭ.ಗೀ 2.41) ಶ್ಲೋಕದಲ್ಲಿ, ಆ ಶ್ಲೋಕಕ್ಕೆ ಸಂಬಂಧಿಸಿದಂತೆ, ವಿಶ್ವನಾಥ ಚಕ್ರವರ್ತಿ ಠಾಕುರರವರು ಆಧ್ಯಾತ್ಮಿಕ ಗುರುವಿನ ಮಾತುಗಳನ್ನು ನಾವು ನಮ್ಮ ಜೀವ ಮತ್ತು ಆತ್ಮವಾಗಿ ಪರಿಗಣಿಸಬೇಕು ಎಂದು ವ್ಯಾಖ್ಯಾನಿಸಿದ್ದಾರೆ. ನಾವು ನಮ್ಮ ಆಧ್ಯಾತ್ಮಿಕ ಗುರುವಿನ ನಿರ್ದಿಷ್ಟ ಸೂಚನೆಯನ್ನು ವೈಯಕ್ತಿಕ ಲಾಭ ನಷ್ಟಗಳನ್ನು ನೋಡದೆ ಬಹಳ ಕಟ್ಟುನಿಟ್ಟಾಗಿ ನಿರ್ವಹಿಸಲು ಪ್ರಯತ್ನಿಸಬೇಕು.

ಹಾಗಾಗಿ ಆ ಭಾವದಲ್ಲಿ ನಾನು ಸ್ವಲ್ಪ ಪ್ರಯತ್ನಿಸಿದೆ. ಆದ್ದರಿಂದ ಅವರಿಗೆ ಸೇವೆ ಸಲ್ಲಿಸಲು ಅವರು ನನಗೆ ಎಲ್ಲಾ ಸೌಲಭ್ಯಗಳನ್ನು ನೀಡಿದ್ದಾರೆ. ಈ ಹಂತಕ್ಕೆ ವಿಷಯಗಳು ಬಂದಿವೆ, ಈ ವೃದ್ಧಾಪ್ಯದಲ್ಲಿ ನಾನು ನಿಮ್ಮ ದೇಶಕ್ಕೆ ಬಂದಿದ್ದೇನೆ, ಮತ್ತು ನೀವೂ ಸಹ ಈ ಆಂದೋಲನವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೀರಿ, ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ. ನಮ್ಮ ಹತ್ತಿರ ಈಗ ಕೆಲವು ಪುಸ್ತಕಗಳಿವೆ. ಆದ್ದರಿಂದ ಈ ಆಂದೋಲನಕ್ಕೆ ಸ್ವಲ್ಪ ನೆಲೆ ಸಿಕ್ಕಿದೆ. ಆದ್ದರಿಂದ ನನ್ನ ಆಧ್ಯಾತ್ಮಿಕ ಗುರುವಿನ ಪುಣ್ಯತಿಥಿಯ ಈ ಸಂದರ್ಭದಲ್ಲಿ, ನಾನು ಅವರ ಇಚ್ಛೆಯನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿರುವಾಗ, ಅದೇ ರೀತಿ, ನನ್ನ ಇಚ್ಛೆಯಂತೆ ಅದೇ ಆದೇಶವನ್ನು ಕಾರ್ಯಗತಗೊಳಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ನಾನು ವೃದ್ಧ, ನಾನು ಕೂಡ ಯಾವುದೇ ಕ್ಷಣದಲ್ಲಿ ದೇಹತ್ಯಾಗ ಮಾಡಬಹುದು. ಅದು ಪ್ರಕೃತಿಯ ನಿಯಮ. ಅದನ್ನು ಯಾರೂ ತಪ್ಪಿಸಲ್ಲು ಸಾಧ್ಯವಿಲ್ಲ. ಆದ್ದರಿಂದ ಅದು ತುಂಬಾ ಆಶ್ಚರ್ಯಕರವಲ್ಲ, ಆದರೆ ನನ್ನ ಗುರು ಮಹಾರಾಜರ ಪುಣ್ಯತಿಥಿಯ ಈ ಶುಭ ದಿನದಂದು ನಾನು ನಿಮಗೆ ಮಾಡುವ ಮನವಿ, ಸ್ವಲ್ಪ ಮಟ್ಟಿಗಾದರೂ ಸರಿ ನೀವು ಕೃಷ್ಣ ಪ್ರಜ್ಞೆ ಆಂದೋಲನದ ಸಾರವನ್ನು ಅರ್ಥಮಾಡಿಕೊಂಡಿರುವಿರಿ, ಈಗ ನೀವು ಅದನ್ನು ಮುನ್ನಡೆಸಲು ಪ್ರಯತ್ನಿಸಬೇಕು. ಈ ಪ್ರಜ್ಞೆಯ ಕೊರತೆಯಿಂದ ಜನರು ಬಳಲುತ್ತಿದ್ದಾರೆ.