KN/Prabhupada 0146 - ನನ್ನ ಅನುಪಸ್ಥಿತಿಯಲ್ಲಿ ಆ ರೆಕಾರ್ಡ್ ಅದೇ ಧ್ವನಿಯನ್ನು ನಿಖರವಾಗಿ ನುಡಿಸುತ್ತದೆ



Lecture on BG 7.4 -- Nairobi, October 31, 1975

ನೀವು ಜಡವಸ್ತುವನ್ನು ಏನೆಂದು ಊಹಿಸುತ್ತಿದ್ದೀರಿ ಎಂದು ಕೃಷ್ಣ ಕೇಳುತ್ತಾನೆ. ಭೌತಿಕ ವಿಜ್ಞಾನಿಗಳು, ಅವರು ಭೂಮಿಯನ್ನು ಅಧ್ಯಯನ ಮಾಡುತ್ತಿದ್ದಾರೆ. ಏನೆಂದು ಕರೆಯುತ್ತಾರೆ? ಭೂತಜ್ಞ. ಅವರು ಮಣ್ಣಿನ ಅಧ್ಯಯನ ಮಾಡುತ್ತಿದ್ದಾರೆ: "ಗಣಿ ಎಲ್ಲಿದೆ? ಚಿನ್ನ ಎಲ್ಲಿದೆ? ಕಲ್ಲಿದ್ದಲು ಎಲ್ಲಿದೆ? ಇದು ಎಲ್ಲಿದೆ, ಅದು ಎಲ್ಲಿದೆ?" ಎಷ್ಟೋ ವಿಷಯಗಳನ್ನು ಅವರು ಅಧ್ಯಯನ ಮಾಡುತ್ತಿದ್ದಾರೆ. ಆದರೆ ಈ ವಸ್ತುಗಳು ಎಲ್ಲಿಂದ ಬಂದವು ಎಂದು ಅವರಿಗೆ ತಿಳಿದಿಲ್ಲ. ಇಲ್ಲಿದೆ... ಭಿನ್ನಾ ಮೇ ಪ್ರಕೃತಿ: "ಇದು ನನ್ನ ಶಕ್ತಿ, ನನ್ನ ಶಕ್ತಿ", ಎಂದು ಕೃಷ್ಣ ವಿವರಿಸುತ್ತಾನೆ. ಈ ವಿಭಿನ್ನ ರಾಸಾಯನಿಕಗಳು ಮತ್ತು ಐಹಿಕ ವಸ್ತುಗಳು ಹೇಗೆ ಪ್ರಕಟವಾದವು, ಎಂದು ಪ್ರತಿಯೊಬ್ಬ ಚಿಂತನಶೀಲ ವ್ಯಕ್ತಿಗೂ ಜಿಜ್ಞಾಸೆ. ಉತ್ತರ ಇಲ್ಲಿದೆ. ಉತ್ತರ ಇಲ್ಲಿದೆ, ಅದು

ಭೂಮಿರ್‌ ಆಪೋ ಅನಲೋ ವಾಯುಃ
ಖಂ ಮನೋ ಬುದ್ಧಿರ್‌ ಏವ ಚ
ಅಹಂಕಾರ ಇತೀಯಂ ಮೇ
ಭಿನ್ನಾ ಪ್ರಕೃತಿರ್‌ ಅಷ್ಟಧಾ
(ಭ.ಗೀ 7.4)

ಭಿನ್ನಾ ಪ್ರಕೃತಿರ್ ಅಷ್ಠಧಾ. ನಾನು ಮಾತನಾಡುತ್ತಿರುವಂತೆ, ಅದು ರೆಕಾರ್ಡ್ ಆಗುತ್ತಿದೆ, ರೆಕಾರ್ಡ್ ಆಗುತ್ತಿದೆ. ಆದರೆ ನನ್ನ ಅನುಪಸ್ಥಿತಿಯಲ್ಲಿ, ಆ ರೆಕಾರ್ಡ್ ಅನ್ನು ಪ್ಲೇ ಮಾಡಿದರೆ, ಅದೇ ಧ್ವನಿಯನ್ನು ಅದು ನಿಖರವಾಗಿ ಪುನಃ ನುಡಿಸುತ್ತದೆ. ಆದ್ದರಿಂದ, ಅದು ನನ್ನ ಶಕ್ತಿ ಅಥವಾ ಬೇರೊಬ್ಬರ ಶಕ್ತಿ, ಆದರೆ ಭಿನ್ನಾ, ನನ್ನಿಂದ ಬೇರ್ಪಟ್ಟಿದೆ. ಹಾಗೆ ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ಎಲ್ಲವೂ ಭಗವಂತನ, ಕೃಷ್ಣನ ಶಕ್ತಿ, ಆದರೆ ಈ ಭೌತಿಕ ಜಗತ್ತು ಎಂದರೆ ನಾವು ಕೃಷ್ಣನನ್ನು ಮರೆಯುತ್ತಿದ್ದೇವೆ ಎಂದು. ಈ ಶಕ್ತಿ ಎಲ್ಲಿಂದ ಬಂತು? ಆ ವಿಷಯವನ್ನು ನಾವು ಗಮನಿಸುತ್ತಿಲ್ಲ. ಭಿನ್ನಾ. ಬಲ್ಲವರು... ಉದಾಹರಣೆಗೆ. ರೆಕಾರ್ಡ್‌ನಲ್ಲಿ ಧ್ವನಿ ಕೇಳಿಸುತ್ತಿದೆ, ಆದರೆ ಈ ಭಾಷಣವನ್ನು ಯಾರು ರೆಕಾರ್ಡ್ ಮಾಡಲಿಲ್ಲವೊ ಅವನು ಗುರುತಿಸಲಾರನು. ಆದರೆ ಆ ಧ್ವನಿಯನ್ನು ತಿಳಿದವನು, "ಇದು ಪ್ರಭುಪಾದರಿಂದ ಅಥವಾ ಸ್ವಾಮೀಜಿಯಿಂದ ಬರುತ್ತಿದೆ", ಎಂದು ಅರ್ಥಮಾಡಿಕೊಳ್ಳಬಹುದು. ಹಾಗೆಯೇ, ಶಕ್ತಿಯು ಇದೆ, ಆದರೆ ನಾವು ಶಕ್ತಿಯ ಮೂಲವನ್ನು ಮರೆತಿರುವುದರಿಂದ, ಅಥವಾ ಶಕ್ತಿಯ ಮೂಲವನ್ನು ನಾವು ಅರಿಯದ ಕಾರಣ, ಭೌತಿಕ ವಸ್ತುಗಳನ್ನು ಅಂತಿಮ ಎಂದು ತಿಳಿದುಕೊಳ್ಳುತ್ತೇವೆ. ಇದು ನಮ್ಮ ಅಜ್ಞಾನ.

ಈ ಪ್ರಕೃತಿ, ಈ ಭೌತಿಕ ಪ್ರಪಂಚವು ಈ ವಸ್ತುಗಳಿಂದ ಕೂಡಿದೆ: ಭೂಮಿರ್ ಆಪೋ'ನಲೋ ವಾಯುಃ ಖಂ ಮನೋ ಬುದ್ಧಿರ್ ಏವ ಚ (ಭ.ಗೀ 7.4). ಹಾಗಾದರೆ ಇದು ಎಲ್ಲಿಂದ ಬಂತು? "ಅವು ನನ್ನ ಶಕ್ತಿಗಳು", ಎಂದು ಕೃಷ್ಣ ವಿವರಿಸುತ್ತಾನೆ. ಏಕೆಂದರೆ ನಾವು ತಿಳಿದುಕೊಳ್ಳಬೇಕು, ಆದ್ದರಿಂದ... ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಈ ಭೂಮಿ ಏಂದರೇನು, ಈ ನೀರು ಏಂದರೇನು, ಈ ಬೆಂಕಿ ಏಂದರೇನು, ಈ ಗಾಳಿ ಏಂದರೇನು, ಈ ಆಕಾಶ ಏಂದರೇನು, ಈ ಮನಸ್ಸು ಏಂದರೇನು, ಈ ಅಹಂಕಾರ ಏಂದರೇನು ಎಂದು ತಿಳಿಯಬೇಕು. ಈ ಜಡ ವಸ್ತುಗಳು, ಈ ವಸ್ತುಗಳು ಎಲ್ಲಿಂದ ಬಂದವು ಎಂದು ನೀವು ತಿಳಿಯಬೇಕು. ನೀರು, ಜಲಜನಕ ಮತ್ತು ಆಮ್ಲಜನಕದಂತಹ ಕೆಲವು ರಾಸಾಯನಿಕಗಳ ಸಂಯೋಜನೆ ಎಂದು ಅವರು ಸಿದ್ಧಾಂತಿಸುತ್ತಾರೆ. ಆದರೆ ಜಲಜನಕ ಮತ್ತು ಆಮ್ಲಜನಕ ರಾಸಾಯನಿಕಗಳು ಎಲ್ಲಿಂದ ಬಂತು? ಅದನ್ನು ಅವರು ಉತ್ತರಿಸಲು ಸಾಧ್ಯವಿಲ್ಲ. ಆದ್ದರಿಂದ, ಇದನ್ನು ಅಚಿಂತ್ಯ-ಶಕ್ತಿ ಎಂದು ಕರೆಯಲಾಗುತ್ತದೆ. ಅಚಿಂತ್ಯ-ಶಕ್ತಿ. ನೀವು ಅಚಿಂತ್ಯ-ಶಕ್ತಿಯನ್ನು ಅನ್ವಯಿಸದಿದ್ದರೆ, ದೇವರ ಅಚಿಂತ್ಯ-ಶಕ್ತಿಯನ್ನು, ನಮ್ಮ ಚಿಂತನೆಗೆ ಅತೀತವಾದ ಶಕ್ತಿಯನ್ನು ನಿರಾಕರಿಸಿದರೆ, ಆಗ ದೇವರಿಲ್ಲ. ಅಚಿಂತ್ಯ-ಶಕ್ತಿ-ಸಂಪನ್ನಃ.

ಆ ಅಚಿಂತ್ಯ-ಶಕ್ತಿ ಏನು ಎಂದು ಈಗ ನೀವು ಅರ್ಥಮಾಡಿಕೊಳ್ಳಬಹುದು. ಅಚಿಂತ್ಯ-ಶಕ್ತಿ ನಿಮ್ಮಲ್ಲಿದೆ, ಅಚಿಂತ್ಯ-ಶಕ್ತಿ ಎಲ್ಲರಲ್ಲೂ ಇದೆ, ಏಕೆಂದರೆ ನಾವು ಭಗವಂತನ ಭಾಗಾಂಶ. ಆದ್ದರಿಂದ, ಅತಿಸೂಕ್ಷ್ಮ... ಆದರೆ ನಾವು... ಅನುಪಾತ ಏನು? ಅನುಪಾತವೆಂದರೆ… ಶಾಸ್ತ್ರದಲ್ಲಿ ಹೇಳಲಾಗಿದೆ... ಏನದು? ಕೇಶಾಗ್ರ-ಶತ-ಭಾಗಸ್ಯ ಶತಧಾ ಕಲ್ಪಿತಸ್ಯ ಚ ಜೀವ-ಭಾಗಃ ಸ ವಿಜ್ಞೇಯಃ ಸ ಚಾನಂತ್ಯಾಯ ಕಲ್ಪತೇ (ಚೈ.ಚ ಮಧ್ಯ 19.140). ಕೇಶಾಗ್ರ-ಶತ-ಭಾಗಸ್ಯ. ಉದಾಹರಣೆಗಾಗಿ. ಏನದು? ಕೂದಲಿನ ತುದಿ, ಕೇವಲ ಒಂದು ಸಣ್ಣ ಪೂರ್ಣ ವಿರಾಮದಷ್ಟು, ನೀವು ಈ ಬಿಂದುವನ್ನು ನೂರು ಭಾಗಗಳಾಗಿ ವಿಭಜಿಸಿ. ಮತ್ತು ಆ ಒಂದು ಭಾಗವನ್ನು ಮತ್ತೆ ನೂರು ಭಾಗಗಳಾಗಿ ವಿಭಾಗಿಸಿ. ಅಂದರೆ, ಕೂದಲಿನ ತುದಿಯ ಹತ್ತು ಸಾವಿರ ಭಾಗ. ಅದು ಪೂರ್ಣವಿರಾಮದಂತಿದೆ. ಅದು ಜೀವ, ಆತ್ಮ, ಆಧ್ಯಾತ್ಮಿಕ ಕಿಡಿ, ಆಣ್ವಿಕ ಭಾಗಗಳು, ಪರಮಾಣು ಭಾಗಗಳ ಪ್ರಮಾಣ. ಆದ್ದರಿಂದ, ಕೇಶಾಗ್ರ-ಶತ-ಭಾಗಸ್ಯ ಶತಧಾ ಕಲ್ಪಿತಸ್ಯ ಚ ಜೀವ-ಭಾಗಃ ಸ ವಿಜ್ಞೇಯಃ ಸ ಚಾನಂತ್ಯಾಯ ಕಲ್ಪತೇ (ಚೈ.ಚ ಮಧ್ಯ 19.140).

ಆದ್ದರಿಂದ, ಪರಿಮಾಣವಿದೆ. ಭೌತಿಕ ಕಣ್ಣುಗಳಿಂದ ನಾವು ಸ್ಥೂಲವಾದ ವಸ್ತುಗಳನ್ನು ಸರಳವಾಗಿ ನೋಡಬಹುದು, ಆದರೆ ಸೂಕ್ಷ್ಮ ವಸ್ತುಗಳನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ನೀವು ಶಾಸ್ತ್ರದಿಂದ ಅರ್ಥ ಮಾಡಿಕೊಳ್ಳಬಹುದು, ಶ್ರುತಿಯಿಂದ. ಆಗ ನಿಮಗೆ ಅರ್ಥವಾಗುತ್ತದೆ. ಭಗವದ್ಗೀತೆಯಲ್ಲಿ ಒಂದು ಶ್ಲೋಕವಿದೆ, ಇಂದ್ರಿಯಾಣಿ ಪರಾಣಿ ಆಹುರ್ ಇಂದ್ರಿಯೇಭ್ಯಃ ಪರಂ ಮನಃ ಮನಸಸ್ ತು ಪರಾ ಬುದ್ಧಿಃ (ಭ.ಗೀ 3.42). ಇಲ್ಲಿ ಮನೋ ಬುದ್ಧಿಃ ಎಂದು ಹೇಳಲಾಗಿರುವಂತೆ. ಮನಸಸ್‌ ಚ ಪರಾ ಬುದ್ಧಿಃ. ಮನಸ್ಸಿಗಿಂತ ಉತ್ತಮವಾದದ್ದು ಅಥವಾ ಶ್ರೇಷ್ಠವಾದದ್ದು ಬುದ್ಧಿವಂತಿಕೆ. ಅದೇನೆಂದರೆ... ಇನ್ನೊಂದು ಕಡೆ, ಸ್ಥೂಲ ವಸ್ತುವೆಂದರೆ ಅದು ಈ ಇಂದ್ರಿಯಗಳು ಎಂದು ವಿವರಿಸಲಾಗಿದೆ. ಇಂದ್ರಿಯಾಣಿ ಪರಾಣಿ ಆಹುಃ. ಇದು ಸ್ಥೂಲ ದೃಷ್ಟಿ. ನಾನು ಮನುಷ್ಯನನ್ನು ನೋಡುತ್ತೇನೆ ಎಂದರೆ ನಾನು ಅವನ ದೇಹ, ಅವನ ಕಣ್ಣು, ಅವನ ಕಿವಿ, ಅವನ ಕೈ ಮತ್ತು ಕಾಲುಗಳು ಮತ್ತು ಎಲ್ಲವನ್ನೂ ನೋಡುತ್ತೇನೆ. ಅದು ಸ್ಥೂಲ ದೃಷ್ಟಿ. ಆದರೆ ಈ ಸ್ಥೂಲ ಇಂದ್ರಿಯಗಳಿಗಿಂತ ಸೂಕ್ಷ್ಮವಾದ, ಇಂದ್ರಿಯಗಳನ್ನು ನಿಯಂತ್ರಿಸುವ ಮನಸ್ಸು ಇದೆ. ನೀವು ಅದನ್ನು ನೋಡುವುದಿಲ್ಲ. ಇಂದ್ರಿಯಾಣಿ ಪರಾಣಿ ಆಹುರ್ ಇಂದ್ರಿಯೇಭ್ಯಃ ಪರಂ ಮನಃ (ಭ.ಗೀ 3.42). ಬುದ್ಧಿಯು ಮನಸ್ಸನ್ನು ನಿಯಂತ್ರಿಸುತ್ತದೆ. ಮನಸಸ್‌ ಚ ಪರಾ ಬುದ್ಧಿಃ. ಆದ್ದರಿಂದ, ನೀವು ಹಾಗೆ ಅಧ್ಯಯನ ಮಾಡಬೇಕು. ನೀವು ಸಾಮಾನ್ಯರಂತೆ "ದೇವರಿಲ್ಲ, ಆತ್ಮವಿಲ್ಲ" ಎಂದು ಸುಮ್ಮನೆ ತಳ್ಳಿಹಾಕಿದರೆ, ಅದು ಧೂರ್ತತನ, ಕೇವಲ ಧೂರ್ತತನ. ಧೂರ್ತನಾಗಿ ಉಳಿಯಬೇಡಿ. ಇಲ್ಲಿ ಭಗವದ್ಗೀತೆ ಇದೆ. ಎಲ್ಲವನ್ನೂ ಬಹಳ ನಿರ್ದಿಷ್ಟವಾಗಿ, ಬಹಳ ಸೂಕ್ಷ್ಮವಾಗಿ ಕಲಿಯಿರಿ. ಮತ್ತು ಇದು ಎಲ್ಲರಿಗೂ ಮುಕ್ತವಾಗಿದೆ.