KN/Prabhupada 0161 - ವೈಷ್ಣವರಾಗಿ ಮತ್ತು ನರಳುತ್ತಿರುವ ಮಾನವೀಯತೆಗಾಗಿ ಮರುಗಿರಿ



His Divine Grace Srila Bhaktisiddhanta Sarasvati Gosvami Prabhupada's Disappearance Day, Lecture -- Los Angeles, December 9, 1968

ನಾವು ಆಧ್ಯಾತ್ಮಿಕ ಗುರುವಿನ, ಅವರ ಆದೇಶದ, ಸೇವೆ ಮಾಡಲು ಕಟ್ಟುನಿಟ್ಟಾಗಿ ಪ್ರಯತ್ನಿಸಿದರೆ, ಆಗ ಕೃಷ್ಣ ನಮಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಾನೆ. ಅದೇ ರಹಸ್ಯ. ನಾನು ಎಂದಿಗೂ ಯೋಚಿಸಲಿಲ್ಲ, ಯಾವುದೇ ಸಾಧ್ಯತೆಯಿಲ್ಲದಿದ್ದರು ವಿಶ್ವನಾಥ ಚಕ್ರವರ್ತಿ ಠಾಕುರ ಅವರ ಭಗವದ್ಗೀತೆಯ ವ್ಯಾಖ್ಯಾನವನ್ನು ಅಧ್ಯಯನ ಮಾಡುವ ಮೂಲಕ ನಾನು ಅದನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಿದೆ. ಭಗವದ್ಗೀತೆಯಲ್ಲಿ ವ್ಯವಸಾಯಾತ್ಮಿಕ-ಬುದ್ಧಿರ್ ಏಕೇಹ ಕುರು-ನಂದನ (ಭ.ಗೀ 2.41) ಎಂಬ ಶ್ಲೋಕವಿದೆ. ಆ ಶ್ಲೋಕಕ್ಕೆ ಸಂಬಂಧಿಸಿದಂತೆ ವಿಶ್ವನಾಥ ಚಕ್ರವರ್ತಿ ಠಾಕುರ ಅವರು ತಮ್ಮ ವ್ಯಾಖ್ಯಾನದಲ್ಲಿ, ‘ನಾವು ಆಧ್ಯಾತ್ಮಿಕ ಗುರುವಿನ ಮಾತುಗಳನ್ನು ನಮ್ಮ ಜೀವನ ಮತ್ತು ಆತ್ಮವಾಗಿ ಸ್ವೀಕರಿಸಬೇಕು’ ಎನ್ನುತ್ತಾರೆ. ನಮ್ಮ ವೈಯಕ್ತಿಕ ಲಾಭ ಅಥವಾ ನಷ್ಟದ ಬಗ್ಗೆ ಚಿಂತಿಸದೆ, ಆಧ್ಯಾತ್ಮಿಕ ಗುರುವಿನ ಆದೇಶವನ್ನು, ನಿರ್ದಿಷ್ಟ ಆದೇಶವನ್ನು, ಬಹಳ ಕಟ್ಟುನಿಟ್ಟಾಗಿ ನಿರ್ವಹಿಸಲು ನಾವು ಪ್ರಯತ್ನಿಸಬೇಕು.

ಹಾಗಾಗಿ ಆ ಉತ್ಸಾಹದಲ್ಲಿ ನಾನು ಸ್ವಲ್ಪ ಪ್ರಯತ್ನಿಸಿದೆ. ಹಾಗಾಗಿ ಅವರ ಸೇವೆ ಮಾಡಲು ನನಗೆ ಎಲ್ಲ ಸೌಲಭ್ಯಗಳನ್ನು ನೀಡಿದ್ದಾರೆ. ವಿಷಯಗಳು ಈ ಹಂತಕ್ಕೆ ಬಂದಿವೆ. ಈ ವೃದ್ಧಾಪ್ಯದಲ್ಲಿ ನಾನು ನಿಮ್ಮ ದೇಶಕ್ಕೆ ಬಂದಿದ್ದೇನೆ, ಮತ್ತು ನೀವು ಸಹ ಈ ಆಂದೋಲನದಲ್ಲಿ ಗಂಭೀರವಾಗಿ ಭಾಗವಹಿಸುತ್ತಿದ್ದೀರಿ, ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ. ನಮ್ಮ ಬಳಿ ಈಗ ಕೆಲವು ಪುಸ್ತಕಗಳಿವೆ. ಹಾಗಾಗಿ, ಈ ಆಂದೋಲನಕ್ಕೆ ಸ್ವಲ್ಪ ಹಿಡಿತ ಸಕ್ಕಿದೆ. ಆದ್ದರಿಂದ, ನನ್ನ ಆಧ್ಯಾತ್ಮಿಕ ಗುರುಗಳ ಪುಣ್ಯತಿಥಿಯ ಈ ಸಂದರ್ಭದಲ್ಲಿ, ನಾನು ಅವರ ಇಚ್ಛೆಯನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿರುವಂತೆಯೇ, ನನ್ನ ಇಚ್ಛೆಯ ಮೂಲಕ ಅದೇ ಆದೇಶವನ್ನು ಕಾರ್ಯಗತಗೊಳಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ನಾನು ಮುದುಕ, ನಾನು ಕೂಡ ಯಾವ ಕ್ಷಣದಲ್ಲಾದರೂ ತೀರಿಹೋಗಬಹುದು. ಅದು ಪ್ರಕೃತಿಯ ನಿಯಮ. ಯಾರೂ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದ್ದರಿಂದ, ಇದು ಆಶ್ಚರ್ಯಕರವಲ್ಲ. ಆದರೆ ನನ್ನ ಗುರು ಮಹಾರಾಜರ ಪುಣ್ಯತಿಥಿಯ ಈ ಶುಭ ದಿನದಂದು ನಾನು ನಿಮಗೆ ಮನವಿ ಮಾಡುತ್ತೇನೆ, ನೀವು ಸ್ವಲ್ಪ ಮಟ್ಟಿಗಾದರೂ ಕೃಷ್ಣ ಪ್ರಜ್ಞೆಯ ಆಂದೋಲನದ ಸಾರವನ್ನು ಅರ್ಥಮಾಡಿಕೊಂಡಿದ್ದೀರಿ. ಹಾಗಾಗಿ, ನೀವು ಅದನ್ನು ಮುನ್ನಡೆಸಲು ಪ್ರಯತ್ನಿಸಬೇಕು. ಈ ಪ್ರಜ್ಞೆಯ ಕೊರತೆಯಿಂದ ಜನರು ನರಳುತ್ತಿದ್ದಾರೆ. ನಾವು ಪ್ರತಿದಿನ ಭಕ್ತರನ್ನು ಕುರಿತು ಪ್ರಾರ್ಥಿಸುವಾಗ,

ವಾಂಚಾ ಕಲ್ಪತರುಭ್ಯಾಶ್ ಚ
ಕೃಪಾ-ಸಿಂಧುಭ್ಯ ಏವ ಚ
ಪತಿತಾನಾಂ ಪಾವನೇಭ್ಯೋ
ವೈಷ್ಣವೇಭ್ಯೋ ನಮೋ ನಮಃ

(ಭಗವಂತನ ಎಲ್ಲಾ ವೈಷ್ಣವ ಭಕ್ತರಿಗೆ ನಾನು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಅವರು ಕಲ್ಪವೃಕ್ಷಗಳಂತೆ ಪ್ರತಿಯೊಬ್ಬರ ಆಸೆಗಳನ್ನು ಪೂರೈಸಬಲ್ಲರು, ಮತ್ತು ಅವರು ಪತಿತ ಆತ್ಮಗಳ ಕಡೆ ಸಹಾನುಭೂತಿ ಹೊಂದಿದ್ದಾರೆ.)

ಒಬ್ಬ ವೈಷ್ಣವ, ಅಥವಾ ಭಗವಂತನ ಭಕ್ತ, ಅವನ ಜೀವನವು ಜನರ ಉದ್ಧಾರಕ್ಕಾಗಿ ಸಮರ್ಪಿತವಾಗಿದೆ. ನಿಮ್ಮಲ್ಲಿ ಹೆಚ್ಚಿನವರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು – ಪೂಜ್ಯ ಜೀಸಸ್ ಕ್ರೈಸ್ಟ್, ‘ನಿಮ್ಮ ಪಾಪಕಾರ್ಯಗಳಿಗಾಗಿ ನನ್ನನ್ನು ನಾನೇ ತ್ಯಾಗ ಮಾಡಿದ್ದೇನೆ’, ಎಂದು ಹೇಳಿದರು. ಅದುವೇ ಭಗವಂತನ ಭಕ್ತನ ಸಂಕಲ್ಪ. ಅವರು ವೈಯಕ್ತಿಕ ಸೌಕರ್ಯಗಳನ್ನು ಬಯಸುವುದಿಲ್ಲ. ಏಕೆಂದರೆ ಅವರು ಕೃಷ್ಣ ಅಥವಾ ಭಗವಂತನನ್ನು ಪ್ರೀತಿಸುತ್ತಾರೆ. ಆದ್ದರಿಂದ, ಅವರು ಎಲ್ಲಾ ಜೀವಿಗಳನ್ನು ಪ್ರೀತಿಸುತ್ತಾರೆ ಏಕೆಂದರೆ ಎಲ್ಲಾ ಜೀವಿಗಳು ಕೃಷ್ಣನೊಂದಿಗೆ ಸಂಬಂಧವನ್ನು ಹೊಂದಿವೆ. ಆದೇ ರೀತಿ, ನೀವೂ ಅದನ್ನು ಕಲಿಯಬೇಕು. ಈ ಕೃಷ್ಣ ಪ್ರಜ್ಞೆಯ ಆಂದೋಲನದ ಅರ್ಥ ವೈಷ್ಣವನಾಗುವುದು ಮತ್ತು ನರಳುತ್ತಿರುವ ಮಾನವಕುಲದ ಕಡೆ ಸಹಾನುಬೂತಿ ತೋರುವುದು. ಆದ್ದರಿಂದ, ನರಳುತ್ತಿರುವ ಮಾನವಕುಲದ ಕಡೆ ಸಹಾನುಭೂತಿ ತೋರಲು, ವಿವಿಧ ದೃಷ್ಟಿಕೋನಗಳಿವೆ. ಜೀವನದ ದೈಹಿಕ ಪರಿಕಲ್ಪನೆಯಿಂದ ಮಾನವಕುಲದ ದುಃಖದ ಬಗ್ಗೆ ಯಾರೋ ಯೋಚಿಸುತ್ತಿದ್ದಾರೆ. ಅನಾರೋಗ್ಯದ ನಿವಾರಣೆಗೆ ಯಾರೋ ಆಸ್ಪತ್ರೆ ತೆರೆಯಲು ಪ್ರಯತ್ನಿಸುತ್ತಿದ್ದಾರೆ. ಯಾರೋ ಬಡತನ ಪೀಡಿತ ದೇಶಗಳಲ್ಲಿ ಅಥವಾ ಸ್ಥಳಗಳಲ್ಲಿ ಆಹಾರ ಪದಾರ್ಥಗಳನ್ನು ವಿತರಿಸಲು ಪ್ರಯತ್ನಿಸುತ್ತಿದ್ದಾರೆ. ಈ ವಿಷಯಗಳು ನಿಸ್ಸಂಶಯವಾಗಿ ಬಹಳ ಒಳ್ಳೆಯದು, ಆದರೆ ಮಾನವಕುಲದ ನಿಜವಾದ ನೋವು ಕೃಷ್ಣ ಪ್ರಜ್ಞೆಯ ಕೊರತೆಯಿಂದಾಗಿ. ಈ ದೈಹಿಕ ಸಂಕಟಗಳು ತಾತ್ಕಾಲಿಕ; ಪ್ರಕೃತಿಯ ನಿಯಮಗಳಿಂದ ಅವುಗಳನ್ನು ಪರಿಹರಿಸಲಾಗುವುದಿಲ್ಲ. ನೀವು ಕೆಲವು ಬಡ ದೇಶದಲ್ಲಿ ಆಹಾರ ಪದಾರ್ಥಗಳ ವಿತರಣೆಯನ್ನು ಮಾಡಿದರೆ ಆ ಸಹಾಯವು ಇಡೀ ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ಅರ್ಥವಲ್ಲ. ಪ್ರತಿಯೊಬ್ಬ ವ್ಯಕ್ತಿಯನ್ನು ಕೃಷ್ಣ ಪ್ರಜ್ಞೆಗೆ ಆವಾಹನೆ ಮಾಡುವುದೇ ನಿಜವಾದ ಪ್ರಯೋಜನಕಾರಿ ಕೆಲಸ.