KN/Prabhupada 0178 - ಕೃಷ್ಣ ನೀಡಿದ ಆದೇಶವೇ ಧರ್ಮ



Lecture on SB 1.10.1 -- Mayapura, June 16, 1973

ಧರ್ಮ ಎಂದರೆ ದೇವೋತ್ತಮ ಪರಮ ಪುರುಷನು ಕೊಟ್ಟದ್ದು. ಅದೇ ಧರ್ಮ. ನೀವು ಧರ್ಮವನ್ನು ತಯಾರಿಸಲು ಸಾಧ್ಯವಿಲ್ಲ. ಇಂದಿನ ದಿನಗಳಲ್ಲಿ ಎಷ್ಟೋ ಧರ್ಮಗಳು ನಿರ್ಮಾಣವಾಗುತ್ತಿವೆ. ಅವು ಧರ್ಮವಲ್ಲ. ಧರ್ಮ ಎಂದರೆ ಭಗವಂತ ನೀಡಿದ ಆದೇಶ. ಅದುವೇ ಧರ್ಮ. ಕೃಷ್ಣನು ಹೇಳಿದಂತೆ: ಸರ್ವ-ಧರ್ಮಾನ್ ಪರಿತ್ಯಜ್ಯ, ಮಾಮ್ ಏಕಂ ಶರಣಂ ವ್ರಜ (ಭ.ಗೀ 18.66). ನಾವು ಹಲವಾರು ಧರ್ಮಗಳನ್ನು ತಯಾರಿಸಿದ್ದೇವೆ: ಹಿಂದೂ ಧರ್ಮ, ಮುಸ್ಲಿಂ ಧರ್ಮ, ಕ್ರಿಶ್ಚಿಯನ್ ಧರ್ಮ, ಪಾರ್ಸಿ ಧರ್ಮ, ಬುದ್ಧ ಧರ್ಮ, ಈ ಧರ್ಮ, ಆ ಧರ್ಮ. ಅವು ಧರ್ಮವಲ್ಲ. ಅವು ಊಹಾಪೋಹಗಳು. ಇಲ್ಲದಿದ್ದರೆ, ವಿರೋಧಾಭಾಸ ಉಂಟಾಗುತ್ತದೆ. ಉದಾಹರಣೆಗೆ, ಹಿಂದೂಗಳು ಗೋಹತ್ಯೆ ಅಧರ್ಮ ಎಂದು ಭಾವಿಸುತ್ತಾರೆ, ಆದರೆ ಮುಸ್ಲಿಮರು ಗೋಹತ್ಯೆ ತಮ್ಮ ಧರ್ಮ ಎಂದು ಭಾವಿಸುತ್ತಾರೆ. ಹಾಗಾದರೆ ಯಾವುದು ಸರಿ? ಗೋಹತ್ಯೆ ಅಧರ್ಮವೇ ಅಥವಾ ಧರ್ಮವೇ?

ಆದ್ದರಿಂದ, ಇವೆಲ್ಲ ಊಹಾಪೋಹಗಳು. ಚೈತನ್ಯ-ಚರಿತಾಮೃತ ಕರಚಾ ಹೇಳುತ್ತದೆ: ಏ ಭಾಲ ಏ ಮಂದ ಸಬ ಮನೋಧರ್ಮ (ಚೈ.ಚ ಅಂತ್ಯ 4.176), "ಮಾನಸಿಕ ಊಹಾಪೋಹಗಳು." ದೇವೋತ್ತಮ ಪರಮ ಪುರುಷನು ಆಜ್ಞಾಪಿಸುವುದೇ ನಿಜವಾದ ಧರ್ಮ. ಅದುವೇ ಧರ್ಮ. ಆದ್ದರಿಂದ, ಕೃಷ್ಣನು ಹೇಳುತ್ತಾನೆ, ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ (ಭ.ಗೀ 18.66). "ನಿಮ್ಮ ಎಲ್ಲಾ ನಿರ್ಮಿತ ಧರ್ಮವನ್ನು ಬಿಟ್ಟುಬಿಡಿ. ನಿಜವಾದ ಧರ್ಮ ಇಲ್ಲಿದೆ. “ಶರಣಂ ವ್ರಜ.” ನನಗೆ ಶರಣಾಗು, ಅದುವೇ ನಿಜವಾದ ಧರ್ಮ." ಧರ್ಮಂ ತು ಸಾಕ್ಷಾದ್ ಭಗವತ್-ಪ್ರಣೀತಮ್ (ಶ್ರೀ.ಭಾ 6.3.19). ಕಾನೂನಿನಂತೆ. ಕಾನೂನುಗಳನ್ನು ಸರ್ಕಾರವು ತಯಾರಿಸಬಹುದು ಅಥವಾ ನೀಡಬಹುದು. ನೀವು ನಿಮ್ಮ ಮನೆಯಲ್ಲಿ ಯಾವುದೇ ಕಾನೂನನ್ನು ತಯಾರಿಸಲು ಸಾಧ್ಯವಿಲ್ಲ. ಅದು ಕಾನೂನಲ್ಲ. ಕಾನೂನು ಎಂದರೆ ಸರ್ಕಾರ ನೀಡುವ ಆದೇಶ. ಪರಮ ಪುರುಷ ಪರಮಾತ್ಮನೆ ಸರ್ವೋಚ್ಚ ಸರ್ಕಾರವು. ಅಹಂ ಸರ್ವಸ್ಯ ಪ್ರಭವೋ (ಭ.ಗೀ 10.8) ಮತ್ತ: ಪರತರಂ ನಾನ್ಯತ್ (ಭ.ಗೀ 7.7). ಕೃಷ್ಣನಿಗಿಂತ ಉತ್ತಮರು ಯಾರೂ ಇಲ್ಲ. ಆದ್ದರಿಂದ, ಕೃಷ್ಣನು ನೀಡಿದ ಆದೇಶವು ಧರ್ಮವಾಗಿದೆ. ನಮ್ಮ ಈ ಕೃಷ್ಣ ಪ್ರಜ್ಞೆಯ ಆಂದೋಲನವೇ ಆ ಧರ್ಮ. ಕೃಷ್ಣ ಹೇಳುತ್ತಾನೆ: “ಸರ್ವ-ಧರ್ಮಾನ್ ಪರಿತ್ಯಜ್ಯ, ಮಾಮ್ ಏಕಂ ಶರಣಂ ವ್ರಜ (ಭ.ಗೀ 18.66). ನೀನು ಎಲ್ಲಾ ಇತರ ತಥಾಕಥಿತ ಧರ್ಮಗಳನ್ನು, ಈ ಧರ್ಮ, ಆ ಧರ್ಮ, ಆ ಅನೇಕ ಧರ್ಮಗಳನ್ನು ಬಿಡು. ಕೇವಲ ನನ್ನಲ್ಲಿ ಶರಣಾಗತನಾಗು."

ಆದ್ದರಿಂದ, ನಾವು ಅದೇ ತತ್ವವನ್ನು ಬೋಧಿಸುತ್ತಿದ್ದೇವೆ ಮತ್ತು ಅದನ್ನು ಚೈತನ್ಯ ಮಹಾಪ್ರಭುಗಳು ದೃಢೀಕರಿಸಿದ್ದಾರೆ. ಶ್ರೀ ಚೈತನ್ಯ ಮಹಾ... ಆಮಾರ ಆಜ್ಞಾಯ ಗುರು ಹನಾ ತಾರ' ಏ ದೇಶ, ಯಾರೇ ದೇಖ ತಾರೆ ಕಹ ಕೃಷ್ಣ-ಉಪದೇಶ (ಚೈ.ಚ ಮಧ್ಯ 7.128). ಇದು ಧರ್ಮ. ಚೈತನ್ಯ ಮಹಾಪ್ರಭುಗಳು ಯಾವುದೇ ಹೊಸ ಧರ್ಮದ ವ್ಯವಸ್ಥೆಯನ್ನು ತಯಾರಿಸಲಿಲ್ಲ. ಇಲ್ಲ. ಚೈತನ್ಯ ಮಹಾಪ್ರಭು ಸ್ವತಃ ಕೃಷ್ಣ. ನಮೋ ಮಹಾ-ವದಾನ್ಯಾಯ ಕೃಷ್ಣ-ಪ್ರೇಮ-ಪ್ರದಾಯ ತೇ, ಕೃಷ್ಣಾಯ ಕೃಷ್ಣ-ಚೈತನ್ಯ-ನಾಮ್ನೆ (ಚೈ.ಚ ಮಧ್ಯ 19.53). ಆದ್ದರಿಂದ, ಒಂದೇ ವ್ಯತ್ಯಾಸವೆಂದರೆ ಅವನು ಸ್ವತಃ ಕೃಷ್ಣ. ಒಂದೇ ವ್ಯತ್ಯಾಸವೆಂದರೆ, ದೇವೋತ್ತಮ ಪರಮ ಪುರುಷನಾದ ಕೃಷ್ಣನು ನೇರವಾಗಿ ಆದೇಶಿಸುತ್ತಾನೆ: "ನೀವು ಎಲ್ಲಾ ಅಸಂಬದ್ಧತೆಯನ್ನು ಬಿಟ್ಟುಬಿಡಿ; ನನಗೆ ಶರಣಾಗಿರಿ". ಇದು ಕೃಷ್ಣ ಅಂದರೆ. ಅವನು ದೇವೋತ್ತಮ ಪರಮ ಪುರುಷನಾದ ಕಾರಣ ನೇರವಾಗಿ ಆದೇಶವನ್ನು ನೀಡುತ್ತಿದ್ದಾನೆ. ಅದೇ ಕೃಷ್ಣ, ಜನರು ಅವನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ... ದೊಡ್ಡ ವಿದ್ವಾಂಸರೂ ಸಹ ಹೇಳುತ್ತಾರೆ, "ಕೃಷ್ಣನು ಹಾಗೆ ಆದೇಶಿಸುವುದು ಅತಿಶಯೋಕ್ತಿ". ಆದರೆ ಅವರು ದುಷ್ಟರು. ಅವರಿಗೆ ತಿಳಿದಿಲ್ಲ. ಅವರು ಕೃಷ್ಣ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಜನರು ಅವನನ್ನು ತಪ್ಪಾಗಿ ಅರ್ಥೈಸಿಕೊಂಡಿದ ಕಾರಣ, ಕೃಷ್ಣನಿಗೆ ಪರಿಪೂರ್ಣವಾಗಿ ಹೇಗೆ ಶರಣಾಗಬೇಕು ಎಂಬುದನ್ನು ಕಲಿಸಲು ಕೃಷ್ಣನು ಭಕ್ತನಾಗಿ ಬಂದನು. ಕೃಷ್ಣ ಬಂದ. ಕೆಲವೊಮ್ಮೆ ನನ್ನ ಸೇವಕನು ನನಗೆ ಮಾಲೀಸು ಮಾಡುತ್ತಾನೆ. ನಾನು ಅವನ ತಲೆಗೆ ಮಾಲೀಸು ಮಾಡಿ "ಹೀಗೆ ಮಾಡು" ಎಂದು ಕಲಿಸುತ್ತೇನೆ. ನಾನು ಅವನ ಸೇವಕನಲ್ಲ, ಆದರೆ ನಾನು ಅವನಿಗೆ ಕಲಿಸುತ್ತಿದ್ದೇನೆ. ಅದೇ ರೀತಿ, ಶ್ರೀ ಚೈತನ್ಯ ಮಹಾಪ್ರಭುಗಳು ಸ್ವತಃ ಕೃಷ್ಣ, ಆದರೆ ಅವರು ಹೇಗೆ ಕೃಷ್ಣನ ಬಳಿಸಾರಬೇಕು, ಹೇಗೆ ಕೃಷ್ಣನಿಗೆ ಸೇವೆ ಸಲ್ಲಿಸಬೇಕು ಎಂದು ಪರಿಪೂರ್ಣವಾಗಿ ಕಲಿಸುತ್ತಿದ್ದಾರೆ. ಒಂದೇ ತತ್ವ. ಕೃಷ್ಣನು "ನೀನು ನನಗೆ ಶರಣಾಗು", ಎಂದು ಹೇಳಿದನು ಮತ್ತು ಚೈತನ್ಯ ಮಹಾಪ್ರಭು "ನೀನು ಕೃಷ್ಣನಿಗೆ ಶರಣಾಗು" ಎಂದು ಹೇಳುತ್ತಾರೆ. ಆದ್ದರಿಂದ, ತಾತ್ವಿಕವಾಗಿ ಯಾವುದೇ ಬದಲಾವಣೆ ಇಲ್ಲ.